ಪುಸ್ತಕ: ಮದನಿಕೆ
ಲೇಖಕರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು: ಟೋಟಲ್ ಕನ್ನಡ
http://www.totalkannada.com/madanike-the-last-scene--P37678?ver=9481024551
ಮದನಿಕೆ- ದಿ ಲಾಸ್ಟ್ ಸೀನ್, ಹೆಸರೇ ಸೂಚಿಸುವಷ್ಟು ಈ ಪುಸ್ತಕವೂ ಕುತೂಹಲಕಾರಿಯಾಗಿದೆ. ವಿಷ್ಣುವರ್ಧನ-ಶಾಂತಲಾ-ಬೇಲೂರು-ಶಿವಗಂಗೆ ಹೀಗೆ ಇತಿಹಾಸದ ಈ ನಾಲ್ಕು ವಿಷಯಗಳನ್ನು ವರ್ತಮಾನದ ಕಥೆಯಲ್ಲಿ ಸುಂದರವಾಗಿ ಹಣೆದು ಮೊದಲ ಪುಟದಿಂದ ಕೊನೆಯ ಪುಟದ ವರೆಗೆ ತಿರುವುತ್ತಾ, ತಿರುವುತ್ತಾ ಒಂದೇ ಗುಕ್ಕಿನಲ್ಲಿ ನನ್ನನ್ನು ಓದಿಸಿದ ಕೆಲವೇ ಪುಸ್ತಕಗಳಲ್ಲಿ ಇದು ಒಂದು.
ಸ್ಯಾಮ್ಸನ್ ಎಂಬ ವಿದೇಶಿ ಚಿತ್ರ ನಿರ್ದೇಶಕ “ದಿ ಡ್ಯಾನ್ಸಿಂಗ್ ಕ್ವೀನ್ ಆಫ್ ಬೇಲೂರ್” ಎಂಬ ಚಿತ್ರದ ಕೊನೆಯ ದೃಶ್ಯ ಚಿತ್ರಿಸುವಾಗ ಒಂದು ಅಪಘಾತ ಸಂಭವಿಸುತ್ತದೆ. ಆ ಅಪಘಾತದ ಹಿಂದಿರುವ ರಹಸ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡುವುದೇ ಈ ಕಥೆಯ ಸಾರ, ಹೆಚ್ಚಿನ ವಿವರ ನೀಡಿದರೆ ಅದು ನಿಮ್ಮೆಲ್ಲರ ಓದಿಗೆ spoiler ಆಗಬಹುದು. ಕಥೆಯಲ್ಲಿ ಬೇಲೂರಿನ ಚರಿತ್ರೆ, ವಿಷ್ಣುವರ್ಧನ-ಶಾಂತಲರ ಕಥೆಗೆ ಸಾಮ್ಯವಾಗಿ ಕಥಾನಾಯಕಿಯ ಜೀವನದ ಘಟನೆಗಳು, ಹಳ್ಳಿಗಳ ಚಿತ್ರಣ, ಅಲ್ಲಲ್ಲಿ ತಿಳಿ ಹಾಸ್ಯ, ಕೆಲವು ಕಡೆ ರಾಜಕೀಯ ಟೀಕೆಗಳು ಎಲ್ಲವೂ ಇವೆ. ಒಟ್ಟಿನಲ್ಲಿ ಒಂದು ಚಲನಚಿತ್ರದಂತೆ ಕಥಾವಸ್ತು, ಕಥೆಯ ಹರಿವು ಮತ್ತು ಪಾತ್ರಗಳಿವೆ. ಇತಿಹಾಸದ ಜೊತೆಗೆ ಮನರಂಜನೆ ಇಷ್ಟಪಡುವವರಿಗೆ ಮೆಚ್ಚುಗೆಯಾಗಬಹುದು. ಮೆಚ್ಚಿನ ಲೇಖಕರು ಶ್ರೀ ಕೆ.ಎನ್. ಗಣೇಶಯ್ಯರವರ ಮುನ್ನುಡಿಯೂ ಸುಂದರವಾಗಿದೆ.
ಇದು ಲೇಖಕರ ಮೊದಲ ಕಾದಂಬರಿ ಎಂದು ತಿಳಿಯುವುದೇ ಇಲ್ಲ. ಶ್ರೀ ರಮೇಶ್ ರವರ ಮೊದಲ ಹೆಜ್ಜೆ ಗಮನಾರ್ಹವಾಗಿದೆ. ಇನ್ನೂ ಮುಂದೆ ಉತ್ತಮ ಕೃತಿಗಳು ಇವರಿಂದ ಬರಲಿ.
ಇಂತಿ,
ವಿಠಲ್ ಶೆಣೈ